ಸುಳ್ಯ: Tulu Times l ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ₹2 ಕೋಟಿ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. 2025-26ನೇ ಸಾಲಿನ ಗ್ರಾಮೀಣಾಭಿವೃದ್ಧಿ ಇಲಾಖೆಯ ಲೆಕ್ಕ ಶೀರ್ಷಿಕೆ 50-54 ಕಾರ್ಯಕ್ರಮದಡಿ ಈ ಅನುದಾನ ಮಂಜೂರಾಗಿದ್ದು, ಕ್ಷೇತ್ರದ ವಿವಿಧ ಗ್ರಾಮಗಳ 10 ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಈ ಅನುದಾನದಡಿ ರಂಗತ್ತಮಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಮೀಪ 300 ಮೀಟರ್ ರಸ್ತೆ ಡಾಂಬರೀಕರಣಕ್ಕೆ ₹10 ಲಕ್ಷ, ಮುರುಳ್ಯ ಗ್ರಾಮದ ಮಾಣಿಯಡ್ಕ–ಪುಣಚತ್ತಾರು ರಸ್ತೆ ಕಾಮಗಾರಿಗೆ ₹25 ಲಕ್ಷ, ಮರ್ಕಂಜ ಗ್ರಾಮದ ಬೊಮ್ಮಾರು–ಕೊಟ್ರಡ್ಕ ರಸ್ತೆ ಅಭಿವೃದ್ಧಿಗೆ ₹25 ಲಕ್ಷ, ಅರಂತೋಡು ಗ್ರಾಮದ ಅರಂತೋಡು–ಪಿಂಗಾರ ತೋಟ–ಅಡ್ಕಬಳೆ–ರೆಂಜಾಳ ರಸ್ತೆ ಕಾಮಗಾರಿಗೆ ₹25 ಲಕ್ಷ ಮಂಜೂರಾಗಿದೆ.
ಇದರೊಂದಿಗೆ ಐವರ್ನಾಡು ಗ್ರಾಮದ ಕೃಷಿ ಕಾಲೋನಿ ರಸ್ತೆ ಅಭಿವೃದ್ಧಿಗೆ ₹30 ಲಕ್ಷ, ಅಮರಮುಡ್ನೂರು ಗ್ರಾಮದ ಶಾಂತಿಮೂಲೆ–ಕಡಪಾಲ ರಸ್ತೆ ಕಾಮಗಾರಿಗೆ ₹10 ಲಕ್ಷ, ಅಲೆಟ್ಟಿ ಗ್ರಾಮದ ಹಾಸ್ಪಾರೆ–ಅಲೆಟ್ಟಿ ರಸ್ತೆ ಅಭಿವೃದ್ಧಿಗೆ ₹25 ಲಕ್ಷ, ಜಾಲ್ಸೂರು ಗ್ರಾಮದ ಕೆಮನಬಳ್ಳಿ ರಸ್ತೆ ಕಾಮಗಾರಿಗೆ ₹10 ಲಕ್ಷ ಅನುದಾನ ನೀಡಲಾಗಿದೆ.
ಅಲ್ಲದೆ, ಕೊಡಿಯಾಲ ಗ್ರಾಮದ ಕಲ್ಲಗದ್ದೆ–ಪೊಟ್ರೆ–ಗ್ರಾಮ ಪಂಚಾಯಿತಿ ಕಚೇರಿವರೆಗಿನ ರಸ್ತೆ ಅಭಿವೃದ್ಧಿಗೆ ₹25 ಲಕ್ಷ ಹಾಗೂ ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟು–ಚೆನ್ನಡ್ಕ ರಸ್ತೆ ಕಾಮಗಾರಿಗೆ ₹25 ಲಕ್ಷ ಮಂಜೂರು ಮಾಡಲಾಗಿದೆ.
ಈ ಕಾಮಗಾರಿಗಳ ಅನುಷ್ಠಾನದಿಂದ ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕ ಮತ್ತಷ್ಟು ಸುಧಾರಣೆಯಾಗಲಿದ್ದು, ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಗುಣಮಟ್ಟದೊಂದಿಗೆ ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
₹2.10 crore grant sanctioned for various road works in Sullia. – ತುಳುಟೈಮ್ಸ್
ಇದನ್ನೂ ಓದಿ :ಜಿಲ್ಲೆಯಲ್ಲೇ ಮೊದಲ ಬಾರಿಗೆ ತೆಂಗಿನಕಾಯಿ ಸುಲಿಯುವ ಯಂತ್ರ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/Nn4MYbE63vE?feature=share











