ಬೆಂಗಳೂರು: Tulu Times l ಕ್ಯಾನ್ಸರ್ ಚಿಕಿತ್ಸೆಯಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ಬೆಂಗಳೂರಿನ ಯಲಹಂಕದ ಮಣಿಪಾಲ್ ಆಸ್ಪತ್ರೆ ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ Elekta Evo ಅಡಾಪ್ಟಿವ್ CT-Linac ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ನಿಖರ, ವೈಯಕ್ತಿಕ ಅಗತ್ಯಗಳಿಗೆ ತಕ್ಕ ಹಾಗೂ ಸುರಕ್ಷಿತ ರೇಡಿಯೇಷನ್ ಚಿಕಿತ್ಸೆಯನ್ನು ನೀಡಲು ನೆರವಾಗಲಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವ Elekta Evo ತಂತ್ರಜ್ಞಾನವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿಯಾಗಿದೆ.
ಮಣಿಪಾಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ವಿಭಾಗವು ಈ ತಂತ್ರಜ್ಞಾನವನ್ನು ಈಗಾಗಲೇ ತನ್ನ ನಿತ್ಯದ ಚಿಕಿತ್ಸಾ ಪದ್ಧತಿಯಲ್ಲಿ ಅಳವಡಿಸಿಕೊಂಡಿದೆ. ಈ ವ್ಯವಸ್ಥೆಯ ಮೂಲಕ ಸ್ಥಳೀಯವಾಗಿ ಮುಂದುವರಿದ ಹಂತದ ಗುದನಾಳ ಕ್ಯಾನ್ಸರ್ ಹೊಂದಿದ್ದ ಮೊದಲ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಕಿಮೋಥೆರಪಿ ಹಾಗೂ ರೇಡಿಯೇಷನ್ ಚಿಕಿತ್ಸೆಯ ಅವಧಿಯಲ್ಲಿ ರೋಗಿಗೆ ಅತಿ ಕಡಿಮೆ ಅಡ್ಡಪರಿಣಾಮಗಳು ಕಂಡುಬಂದಿರುವುದು ಈ ತಂತ್ರಜ್ಞಾನದ ಪರಿಣಾಮಕಾರಿತ್ವವನ್ನು ತೋರಿಸಿದೆ. Elekta ಸಂಸ್ಥೆಯ ಟರ್ಕಿ, ಭಾರತ, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ವಿಭಾಗದ ಮುಖ್ಯಸ್ಥ ಫಿರಾಸ್ ಅಲ್ ಹಸನ್ ಮಾತನಾಡಿ, ಭಾರತದಲ್ಲಿ ಅಡಾಪ್ಟಿವ್ ರೇಡಿಯೇಷನ್ ಚಿಕಿತ್ಸೆಯ ವಿಸ್ತರಣೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಎಐ ಆಧಾರಿತ ಇಮೇಜಿಂಗ್ ಮತ್ತು ಆನ್ಲೈನ್ ಅಡಾಪ್ಟಿವ್ ಸಾಮರ್ಥ್ಯದಿಂದ ವೈದ್ಯರು ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ಹೆಚ್ಚು ನಿಖರವಾದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಯಲಹಂಕದ ಮಣಿಪಾಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯ ಸಲಹೆಗಾರ ಡಾ. ವಿಕ್ರಂ ಮೈಯ್ಯ ಮಾತನಾಡಿ, Elekta Evo ರೋಗಿಯ ದೇಹದ ರಚನೆಯಲ್ಲಿ ದಿನದಿಂದ ದಿನಕ್ಕೆ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಚಿಕಿತ್ಸಾ ಯೋಜನೆಯನ್ನು ಪರಿಷ್ಕರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಕ್ಯಾನ್ಸರ್ ಗಡ್ಡೆಗಳಿಗೆ ಅತ್ಯಂತ ನಿಖರವಾಗಿ ರೇಡಿಯೇಷನ್ ನೀಡುವ ಜೊತೆಗೆ ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಗರ್ಭಕಂಠ, ಗುದನಾಳ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಆರಂಭಿಕ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿವೆ ಎಂದು ಹೇಳಿದರು. ಪ್ರಸ್ತುತ, ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಗರ್ಭಕಂಠ, ಗುದನಾಳ ಹಾಗೂ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದು ಭಾರತದಲ್ಲಿ ವೈಯಕ್ತಿಕ ಕ್ಯಾನ್ಸರ್ ಚಿಕಿತ್ಸೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
Precise cancer treatment through AI; another historic achievement by Manipal Hospital – ತುಳುಟೈಮ್ಸ್
ಇದನ್ನೂ ಓದಿ :ಅಡಿಕೆ ಬೆಳೆಗಾರರ ಗಮನಕ್ಕೆ: ರೋಗನಾಶಕ ಖರೀದಿಗೆ ಸರ್ಕಾರದಿಂದ ಸಹಾಯಧನ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w











