ಸಿನೆಮಾ : Tulu Times l ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರ ಚಿತ್ರದ ದೈವ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಸೂಚನೆಯ ಬಳಿಕ ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮೂಲಗಳ ಪ್ರಕಾರ, ಯಾವುದೇ ಪೂರ್ವ ಘೋಷಣೆ ಇಲ್ಲದೆ ದೇವಸ್ಥಾನಕ್ಕೆ ಆಗಮಿಸಿದ ನಟ ಸಾಮಾನ್ಯ ಭಕ್ತರಂತೆ ದೇವರ ದರ್ಶನ ಪಡೆದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಅವರು ದೇವಿಯ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.

ಈ ವಿವಾದವು ಕಳೆದ ವರ್ಷ ಗೋವಾದಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಆರಂಭವಾಗಿತ್ತು. ಕಾರ್ಯಕ್ರಮದ ಸಂವಾದದ ವೇಳೆ ರಣವೀರ್ ಸಿಂಗ್ ಅವರು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬ್ಲಾಕ್ಬಸ್ಟರ್ ಚಿತ್ರ ‘ಕಾಂತಾರ’ದಲ್ಲಿನ ದೈವ ಪ್ರದರ್ಶನವನ್ನು ಹೋಲುವ ರೀತಿಯಲ್ಲಿ ಮಿಮಿಕ್ರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ನಡೆ ದೈವ ಆರಾಧನೆಗೆ ಅವಮಾನಕಾರಿಯಾಗಿದೆ ಎಂದು ಕೆಲವು ಸಂಘಟನೆಗಳು ಹಾಗೂ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆ ಬಳಿಕ ಬೆಂಗಳೂರಿನ ವಕೀಲರೊಬ್ಬರು ನಟನ ವಿರುದ್ಧ ದೂರು ದಾಖಲಿಸಿ, ಪವಿತ್ರ ದೈವ ಸಂಪ್ರದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ರಣವೀರ್ ಸಿಂಗ್ ಅವರು ಪ್ರಕರಣ ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ನಟರ ಪರ ವಕೀಲರು ಕ್ಷಮೆಯಾಚನೆ ಸಲ್ಲಿಸಿದ್ದರು. ಕ್ಷಮಾಪಣೆಯನ್ನು ಪರಿಗಣಿಸಿದ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿ, ನಾಲ್ಕು ವಾರಗಳೊಳಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವಂತೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಡಾನ್ 3 ಚಿತ್ರದ ಸುತ್ತ ನಡೆಯುತ್ತಿರುವ ವಿವಾದದ ನಡುವೆಯೂ ಈ ಭೇಟಿ ಗಮನ ಸೆಳೆದಿದೆ. ಸುಮಾರು ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದ ಯೋಜನೆಯಿಂದ ನಟ ಹಿಂದೆ ಸರಿದ ಹಿನ್ನೆಲೆಯಲ್ಲಿ ಬಾಲಿವುಡ್ ಫಿಲ್ಮ್ ಫೆಡರೇಶನ್ ಅವರು ರಣವೀರ್ ಸಿಂಗ್ ರನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ ಎಂಬ ವರದಿಗಳು ಹರಿದಾಡುತ್ತಿವೆ.
Kantara Devi controversy: Ranveer Singh visits Chamundeshwari temple – ತುಳು ಟೈಮ್ಸ್
ಇದನ್ನೂ ಓದಿ : ಎಲ್ಲರ ಕಷ್ಟದಲ್ಲಿ ಜೊತೆಯಾದವರು ಏಕೆ ಕೊನೆಯಲ್ಲಿ ಒಂಟಿಯಾಗುತ್ತಾರೆ?
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/4pEuD7fDOuo?si=NM0tBe15Cbzi85Bp











