ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜಿಲ್ಲೆಯಲ್ಲಿ ಸೋಂಕು ರೋಗಗಳ ಆತಂಕ: ಕಾಮಾಲೆ, ಡೆಂಗ್ಯೂ ವಿರುದ್ಧ ಮುನ್ನೆಚ್ಚರಿಕೆ ವಹಿಸಿ

ಮಂಗಳೂರು : Tulu Times l ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮಾಲೆ ಹಾಗೂ ಡೆಂಗ್ಯೂ ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡುವ ಬದಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮನವಿ ಮಾಡಿದ್ದಾರೆ. ಗುರುವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದ್ರೋಳಿ, ಅಲಕೆ ಮತ್ತು ಡೊಂಗರಕೆರೆ ಪ್ರದೇಶಗಳಲ್ಲಿ ಕಾಮಾಲೆ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ ಎಂದು ತಿಳಿಸಿದರು.

ಜೂನ್ 23ರಿಂದ ಇದುವರೆಗೆ 19 ಕಾಮಾಲೆ ಪ್ರಕರಣಗಳು ದಾಖಲಾಗಿದ್ದು, 832 ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಅಲ್ಲದೆ 40 ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 26 ಮಾದರಿಗಳು ಸುರಕ್ಷಿತವಾಗಿವೆ. ಒಂದು ಮಾದರಿಯಲ್ಲಿ ನೀರು ಕಲುಷಿತವಾಗಿರುವುದು ದೃಢಪಟ್ಟಿದ್ದು, ಉಳಿದ 13 ಮಾದರಿಗಳ ವರದಿ ನಿರೀಕ್ಷೆಯಲ್ಲಿದೆ.

ಈ ವರ್ಷದ ಜನವರಿಯಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ 35 ಹೆಪಟೈಟಿಸ್ A ಮತ್ತು E ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಂಗಳೂರು ನಗರದಲ್ಲಿ 24, ಬಂಟ್ವಾಳದಲ್ಲಿ 4, ಬೆಳ್ತಂಗಡಿಯಲ್ಲಿ 1 ಹಾಗೂ ಪುತ್ತೂರಿನಲ್ಲಿ 6 ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು–ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ ಎಂದು ಡಾ. ತಿಮ್ಮಯ್ಯ ಹೇಳಿದರು. ಸುರಕ್ಷಿತ ಕುಡಿಯುವ ನೀರು ಬಳಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಕೈಗಳನ್ನು ಆಗಾಗ ತೊಳೆಯುವುದು ಕಾಮಾಲೆ ತಡೆಗಟ್ಟಲು ಪರಿಣಾಮಕಾರಿ ಕ್ರಮಗಳಾಗಿವೆ. ಲಕ್ಷಣಗಳು ತೀವ್ರಗೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳು ಕಡಿಮೆಯಿದ್ದರೂ, ಇನ್ನೂ ಭಾರೀ ಮಳೆಯಾಗದ ಕಾರಣ ಈ ಪರಿಸ್ಥಿತಿ ಇದೆ. ಮುಂಗಾರು ತೀವ್ರಗೊಂಡ ಬಳಿಕ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಜಿಲ್ಲೆಯಲ್ಲಿ 2023ರಲ್ಲಿ 566, 2024ರಲ್ಲಿ 534 ಹಾಗೂ 2025ರಲ್ಲಿ 190 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಡೆಂಗ್ಯೂ ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ಅವರು ಹೇಳಿದರು.

Concern over infectious diseases in the district: Take precautions against jaundice and dengue – ತುಳುಟೈಮ್ಸ್

ಇದನ್ನೂ ಓದಿ :ತಮಿಳುನಾಡಿನ ಪುರಾತನ ಪರಂಪರೆ ಮತ್ತೆ ತಾಯ್ನಾಡಿಗೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/BjNjVc_kP1Y?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page