ತಂತ್ರಜ್ಞಾನ : Tulu Times l ಭೂಕಂಪ ಸಂಭವಿಸಿದಾಗ ವಿದ್ಯುತ್ ಕಡಿತಗೊಂಡರೆ ಕಟ್ಟಡಗಳು ಮತ್ತು ಸೇತುವೆಗಳ ಸುರಕ್ಷತೆ ದೊಡ್ಡ ಸವಾಲಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ವಿಜ್ಞಾನಿಗಳು ಹೊಸ ರೀತಿಯ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಉಕ್ಕಿನ ಗೋಳಗಳನ್ನು ತುಂಬಿದ ಸಿಲಿಂಡರ್ ಮಾದರಿಯ ಈ ಸಾಧನವು ಯಾವುದೇ ವಿದ್ಯುತ್ ಅವಶ್ಯಕತೆ ಇಲ್ಲದೇ ಭೂಕಂಪದ ಕಂಪನದ ಪರಿಣಾಮವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಈ ಸಾಧನವನ್ನು ಮೌಸಾ ಲೆಬ್ಲೋಬಾ ಅವರು ಅಭಿವೃದ್ಧಿಪಡಿಸಿದ್ದು, ಕಟ್ಟಡಗಳು, ಸೇತುವೆಗಳು ಹಾಗೂ ಸೂಕ್ಷ್ಮ ಯಂತ್ರೋಪಕರಣಗಳನ್ನು ಭೂಕಂಪದ ಹೊಡೆತದಿಂದ ರಕ್ಷಿಸುವ ಉದ್ದೇಶದಿಂದ ಈ ತಂತ್ರಜ್ಞಾನ ರೂಪಿಸಲಾಗಿದೆ. ಈ ಸಾಧನವು ಸರಳ ಯಾಂತ್ರಿಕ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಒಳಗೆ ಖಾಲಿ ಉಕ್ಕಿನ ಸಿಲಿಂಡರ್ ಇರುತ್ತದೆ. ಅದರೊಳಗೆ ಗಟ್ಟಿ ಉಕ್ಕಿನ ಚೆಂಡುಗಳನ್ನ ತುಂಬಲಾಗುತ್ತದೆ. ಮಧ್ಯಭಾಗದಲ್ಲಿ ಒಂದು ಚಲಿಸುವ ದಂಡ ಇರುತ್ತದೆ. ಭೂಕಂಪ, ಬಲವಾದ ಗಾಳಿ, ರೈಲು ಸಂಚಾರ ಅಥವಾ ಕೈಗಾರಿಕಾ ಯಂತ್ರಗಳಿಂದ ಉಂಟಾಗುವ ಕಂಪನದ ವೇಳೆ ಈ ದಂಡ ಮುಂದೂ ಹಿಂದೂ ಚಲಿಸುತ್ತದೆ. ದಂಡಕ್ಕೆ ಅಂಟಿಸಲಾದ ಸಣ್ಣ ಕಡ್ಡಿಗಳು ಉಕ್ಕಿನ ಗೋಳಗಳಿಗೆ ಒತ್ತಡ ಉಂಟುಮಾಡಿ ಘರ್ಷಣೆ ಸೃಷ್ಟಿಸುತ್ತವೆ. ಈ ಘರ್ಷಣೆಯ ಪರಿಣಾಮ ಕಂಪನದಿಂದ ಉಂಟಾಗುವ ಶಕ್ತಿಯ ಒಂದು ಭಾಗ ಉಷ್ಣ ಮತ್ತು ಒಳಚಲನೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಸಂಪೂರ್ಣ ಕಂಪನ ಕಟ್ಟಡಕ್ಕೆ ತಲುಪದೇ ಅದರ ತೀವ್ರತೆ ಕಡಿಮೆಯಾಗುತ್ತದೆ.
ಈ ಸಾಧನದಲ್ಲಿ ಯಾವುದೇ ಕಂಪ್ಯೂಟರ್, ಸೆನ್ಸರ್, ಸಾಫ್ಟ್ವೇರ್ ಅಥವಾ ವಿದ್ಯುತ್ ಅವಶ್ಯಕತೆ ಇಲ್ಲ. ಸಂಶೋಧಕರ ಮಾತಿನ ಪ್ರಕಾರ ಇದು ಶುದ್ಧ ಭೌತಶಾಸ್ತ್ರದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಕೇವಲ ಚಲನೆ ಮತ್ತು ಘರ್ಷಣೆಯ ಮೂಲಕ ಕಂಪನ ಶಕ್ತಿಯನ್ನು ಹೀರಿಕೊಳ್ಳುವ ಕಾರಣ, ವಿದ್ಯುತ್ ಕಡಿತವಾದ ಸಂದರ್ಭದಲ್ಲೂ ಇದು ಕಾರ್ಯನಿರ್ವಹಿಸಬಲ್ಲದು.
ಇನ್ನು ಭೂಕಂಪದ ವೇಳೆ ಕಟ್ಟಡ ಕುಸಿಯುವುದೇ ಮುಖ್ಯ ಅಪಾಯವಲ್ಲ; ಅತಿಯಾದ ಅಲುಗಾಟ, ತಿರುವು ಮತ್ತು ಕಂಪನಗಳಿಂದ ಗೋಡೆಗಳು ಬಿರುಕು ಬಿಟ್ಟು ವಿದ್ಯುತ್ ಮತ್ತು ನೀರಿನ ಸಂಪರ್ಕ ಹಾನಿಯಾಗುವುದು ಹಾಗೂ ದುಬಾರಿ ಯಂತ್ರೋಪಕರಣಗಳು ಹಾಳಾಗುವುದು ಕೂಡ ದೊಡ್ಡ ಸಮಸ್ಯೆಯಾಗುತ್ತದೆ. ಇಂಜಿನಿಯರಿಂಗ್ ಭಾಷೆಯಲ್ಲಿ ಇದನ್ನು ಕಂಪನದಿಂದ ಉಂಟಾಗುವ ಶಕ್ತಿಯನ್ನು ಬೇರೆ ದಿಕ್ಕಿಗೆ ಹರಿಸಿ ಅದರ ತೀವ್ರತೆಯನ್ನು ಕಡಿಮೆ ಮಾಡುವುದು ಎನ್ನಲಾಗುತ್ತದೆ.
ಈ ಹೊಸ ಸಾಧನವು ಕಾರಿನ ಶಾಕ್ ಅಬ್ಸಾರ್ಬರ್ನಂತೆ ಕೆಲಸ ಮಾಡಿ ಕಂಪನದ ಹೊಡೆತವನ್ನು ಹೀರಿಕೊಳ್ಳುತ್ತದೆ. ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ವಿದ್ಯುತ್, ಸಂಪರ್ಕ ವ್ಯವಸ್ಥೆ ಹಾಗೂ ಸಾರಿಗೆ ಸೇವೆಗಳು ಸ್ಥಗಿತಗೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ವಿದ್ಯುತ್ ಅವಲಂಬಿತ ಭದ್ರತಾ ವ್ಯವಸ್ಥೆಗಳು ವಿಫಲವಾಗುವ ಸಾಧ್ಯತೆ ಇದೆ.
ಆದರೆ ಈ ಹೊಸ ಸಾಧನವು ಸಂಪೂರ್ಣ ಯಾಂತ್ರಿಕ ವ್ಯವಸ್ಥೆಯಾಗಿರುವುದರಿಂದ ವಿದ್ಯುತ್ ಇಲ್ಲದಿದ್ದರೂ ಕಾರ್ಯನಿರ್ವಹಿಸಬಲ್ಲದು. ಇದೇ ಇದರ ಪ್ರಮುಖ ವಿಶೇಷತೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರಾರಂಭಿಕ ಪ್ರಯೋಗಗಳಲ್ಲಿ ಈ ಸಾಧನವು ಸುಮಾರು 14 ಶೇಕಡಾ ಕಂಪನ ನಿಯಂತ್ರಣ ಸಾಮರ್ಥ್ಯ ತೋರಿಸಿರುವುದಾಗಿ ವರದಿಯಾಗಿದೆ.
Technology that reduces earthquake damage and works even without electricity – ತುಳುಟೈಮ್ಸ್
ಇದನ್ನೂ ಓದಿ :ಮಂಗಳೂರಿನ ಕಾವೂರಿನಲ್ಲಿ ಬಾವಿ ನೀರಿನಲ್ಲಿ ಡೀಸೆಲ್ ಪತ್ತೆ: ಆತಂಕದಲ್ಲಿ ಸ್ಥಳೀಯರು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=hurw_7cSKrG2zISj











