ಬಾಳಿಲ: Tulu Times l ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಶಾಲಾ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳ ಮೂಲಕ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ಆಡಳಿತ ನಿರ್ದೇಶಕ ಹಾಗೂ ಖ್ಯಾತ ವೈದ್ಯರಾದ ಡಾ. ಸುರೇಶ ಪುತ್ತೂರಾಯ ಹೇಳಿದರು.

ಬಾಳಿಲದ ಕಳಂಜ ಬಾಳಿಲ ಸೇವಾ ಸಹಕಾರಿ ಸಂಘದ ಕಟ್ಟಡದ ಪ್ರಥಮ ಮಹಡಿಯಲ್ಲಿ ನೂತನವಾಗಿ ಆರಂಭಿಸಲಾದ ಡಾ. ಗಾನಶ್ರೀಯವರ ಸ್ವಾಸ್ಥ್ಯ ಆರೋಗ್ಯ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುವುದು ಅತ್ಯಂತ ಅಗತ್ಯ. ನುರಿತ ಹಾಗೂ ಅನುಭವಿ ವೈದ್ಯರು ಗ್ರಾಮೀಣ ಭಾಗದಲ್ಲೇ ಕ್ಲಿನಿಕ್ ಆರಂಭಿಸಿರುವುದು ಸ್ಥಳೀಯ ಜನರಿಗೆ ಅನುಕೂಲವಾಗುವುದರ ಜೊತೆಗೆ ಸಂತಸ ತಂದಿದೆ. ಆರೋಗ್ಯ ಸೇವೆಯೊಂದಿಗೆ ಸಾರ್ವಜನಿಕರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವ ಕಾರ್ಯವೂ ನಡೆಯಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಳಿಲ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ ಅವರು ಕ್ಲಿನಿಕ್ಗೆ ಶುಭ ಹಾರೈಸಿದರು. ಸೊಸೈಟಿ ಉಪಾಧ್ಯಕ್ಷ ಶ್ರೀಹರ್ಷ ಜೋಗಿಬೆಟ್ಟು, ನಿರ್ದೇಶಕರಾದ ರವೀಂದ್ರ ರೈ, ಪ್ರಭಾಕರ್ ಆಳ್ವ, ಸವಿತಾ ಹಾಗೂ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯದ ಜೀವಶಾಸ್ತ್ರ ಉಪನ್ಯಾಸಕಿ ಶ್ರುತಿ ಅಶ್ವತ್ ಯಳದಾಲು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸ್ವಾಸ್ಥ್ಯ ಆರೋಗ್ಯ ಕ್ಲಿನಿಕ್ನ ವೈದ್ಯಾಧಿಕಾರಿ ಡಾ. ಗಾನಶ್ರೀ ಗಣ್ಯರು ಹಾಗೂ ಅತಿಥಿಗಳನ್ನು ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಡಾ. ಗಾನಶ್ರೀಯವರ ಪತಿ ಇಂಜಿನಿಯರ್ ಶ್ರುಜನ್ ಬಾಬ್ಲುಬೆಟ್ಟು, ತಂದೆ ಪದ್ಮಯ್ಯ ಸಿ.ಎಚ್., ತಾಯಿ ರೇಖಾ ಪದ್ಮಯ್ಯ, ಮಾವ ಹರಿಶ್ಚಂದ್ರ ಬಾಬ್ಲುಬೆಟ್ಟು, ಅತ್ತೆ ವಾಣಿ ಬಾಬ್ಲುಬೆಟ್ಟು ಸೇರಿದಂತೆ ಬಂಧುಗಳು, ಕಳಂಜ ಬಾಳಿಲ ಸೇವಾ ಸಹಕಾರಿ ಸಂಘದ ನಿರ್ದೇಶಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಸುರೇಶ ಪುತ್ತೂರಾಯ ಹಾಗೂ ಅಜಿತ್ ರಾವ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರಿಗೆ ಡಾ. ಗಾನಶ್ರೀ ಧನ್ಯವಾದ ಸಲ್ಲಿಸಿದರು.
‘Swasthya Health Clinic’ Launched in Balila: Quality Healthcare for Rural Residents – ತುಳು ಟೈಮ್ಸ್
ಇದನ್ನೂ ಓದಿ : 3 ಯೋಗಾಸನ, ಹಲವು ಆರೋಗ್ಯ ಲಾಭ ; ಪ್ರತಿದಿನ ಅಭ್ಯಾಸ ಮಾಡಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w











