ಸುಳ್ಯ: Tulu Times l ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಇದರ 25ನೇ ವರ್ಷದ ಸಂಭ್ರಮದ ಅಂಗವಾಗಿ ಆ.29ರಂದು ‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಳ್ಯದ ಹಳಗೇಟಿನಲ್ಲಿರುವ ರಂಗಮನೆ ಅಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಯಿಂದ ರಾತ್ರಿ 9.45ರವರೆಗೆ ತಾಳಮದ್ದಳೆ ನಡೆಯಲಿದೆ. ಯಕ್ಷಗಾನ ಹಾಗೂ ತಾಳಮದ್ದಳೆ ಕಲೆಯ ಆಸಕ್ತರಿಗೆ ವಿಶೇಷ ಕಾರ್ಯಕ್ರಮವಾಗಿರುವ ‘ಭೀಷ್ಮ ವಿಜಯ’ದಲ್ಲಿ ನಾಡಿನ ಹೆಸರಾಂತ ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭೀಷ್ಮನ ಪಾತ್ರವನ್ನು ಸುಣ್ಣಂಬಳ ವಿಶ್ವೇಶ್ವರ ಭಟ್, ಸಾಲ್ವನಾಗಿ ಜಬ್ಬಾರ್ ಸಮೋ, ಅಂಬೆಯಾಗಿ ಪ್ರೊ. ಪವನ್ ಕಿರಣಕೆರೆ ಹಾಗೂ ಪರಶುರಾಮನಾಗಿ ರಾಧಾಕೃಷ್ಣ ಕಲ್ಚಾರು ಕಾಣಿಸಿಕೊಳ್ಳಲಿದ್ದಾರೆ. ಬ್ರಾಹ್ಮಣನ ಪಾತ್ರವನ್ನು ಉಬರಡ್ಕ ಉಮೇಶ್ ಶೆಟ್ಟಿ ನಿರ್ವಹಿಸಲಿದ್ದಾರೆ.
ತಾಳಮದ್ದಳೆಯ ಭಾಗವತಿಕೆಯನ್ನು ಹೊಸಮೂಲೆ ಗಣೇಶ್ ಭಟ್ ವಹಿಸಲಿದ್ದು, ಚೆಂಡೆಯಲ್ಲಿ ವಳಕುಂಜ ಕುಮಾರ ಸುಬ್ರಹ್ಮಣ್ಯ, ಮದ್ದಳೆಯಲ್ಲಿ ಪದ್ಯಾಣ ಜಯರಾಮ ಭಟ್ ಹಾಗೂ ಚಕ್ರತಾಳದಲ್ಲಿ ಮನುಜ ನೇಹಿಗ ಸಹಕರಿಸಲಿದ್ದಾರೆ.

ಮಹಾಭಾರತದ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭೀಷ್ಮ ವಿಜಯವು ಭೀಷ್ಮ, ಅಂಬೆ ಹಾಗೂ ಪರಶುರಾಮರ ಸುತ್ತ ಹೆಣೆದುಕೊಂಡಿರುವ ಕಥಾನಕವಾಗಿದ್ದು, ವಾಗ್ವೈಖರಿ, ಪೌರಾಣಿಕ ನಿರೂಪಣೆ ಹಾಗೂ ಸಂಗೀತದ ಸಮ್ಮಿಲನದ ಮೂಲಕ ಪ್ರೇಕ್ಷಕರನ್ನು ಸೆಳೆಯಲಿದೆ. ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರವು ಕಳೆದ 25 ವರ್ಷಗಳಿಂದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸುತ್ತಾ ಬಂದಿದೆ. ಸಂಸ್ಥೆಯ 25ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.
ತಾಳಮದ್ದಳೆ ಸಂಜೆ 6 ಗಂಟೆಗೆ ಸರಿಯಾಗಿ ಆರಂಭವಾಗಲಿದ್ದು, ಸರ್ವರಿಗೂ ಮುಕ್ತ ಸ್ವಾಗತವಿದೆ ಎಂದು ಆಯೋಜಕರು ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Rangamane’s 25th Anniversary: ‘Bhishma Vijaya’ Yakshagana Talamaddale on August 29 – ತುಳು ಟೈಮ್ಸ್
ಇದನ್ನೂ ಓದಿ : ಪ್ರಜ್ಞಾನಂದನಿಗೆ ಐತಿಹಾಸಿಕ ಪಟ್ಟ ; ಮೊದಲ ಭಾರತೀಯ ಚಾಂಪಿಯನ್
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w











