ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಶ್ವ ಜೇನುನೊಣ ದಿನ 2026: ಭಾರತದ ಜೇನು ಕ್ರಾಂತಿಗೆ ಅಪಾಯ ಅಡಗಿದೆಯೇ?

ಜೇನು : Tulu Times l ವಿಶ್ವ ಜೇನುನೊಣ ದಿನ ಹಿನ್ನೆಲೆಯಲ್ಲಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಜೇನು ಉದ್ಯಮದ ಯಶಸ್ಸಿನ ಜೊತೆಗೆ ಪರಿಸರ ಸಂಬಂಧಿತ ಗಂಭೀರ ಆತಂಕಗಳೂ ಗಮನ ಸೆಳೆಯುತ್ತಿವೆ. ದೇಶದ ಜೇನು ರಫ್ತು ಹೆಚ್ಚುತ್ತಿರುವ ನಡುವೆಯೇ, ಕೀಟನಾಶಕಗಳ ಅತಿಯಾದ ಬಳಕೆ ಜೇನುನೊಣಗಳ ಬದುಕಿಗೆ ಅಪಾಯವಾಗುತ್ತಿದೆ ಎಂಬ ಎಚ್ಚರಿಕೆ ತಜ್ಞರಿಂದ ವ್ಯಕ್ತವಾಗಿದೆ.

ರಾಜಸ್ತಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಾಸಿವೆ ಹೊಲಗಳು, ಕರ್ನಾಟಕದ ಸೂರ್ಯಕಾಂತಿ ಬೆಳೆ ಪ್ರದೇಶಗಳು ಹಾಗೂ ಬಿಹಾರ್ ನ ಲಿಚಿ ತೋಟಗಳು ಭಾರತದಿಂದ ರಫ್ತು ಆಗುವ ಬಹುತೇಕ ಜೇನಿನ ಪ್ರಮುಖ ಮೂಲಗಳಾಗಿವೆ. ಆದರೆ ಇದೇ ಪ್ರದೇಶಗಳು ದೇಶದಲ್ಲೇ ಅತಿ ಹೆಚ್ಚು ಕೀಟನಾಶಕ ಬಳಸುವ ಕೃಷಿ ವಲಯಗಳಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ನಿಯೊನಿಕೋಟಿನಾಯ್ಡ್ ವರ್ಗದ ಕೀಟನಾಶಕಗಳು ಜೇನುನೊಣಗಳ ಜೀವಿತಕ್ಕೆ ಅಪಾಯಕಾರಿ ಎಂದು ಗುರುತಿಸಲಾಗಿದ್ದು, ಯುರೋಪಿಯನ್ ಯೂನಿಯನ್ 2018ರಲ್ಲಿ ಇವುಗಳ ಬಹಿರಂಗ ಬಳಕೆಯನ್ನು ನಿಷೇಧಿಸಿತ್ತು. ಆದರೆ ಭಾರತದಲ್ಲಿ ಹೂ ಬಿಡುವ ಋತುವಿನಲ್ಲಿ ಇಂತಹ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸುವ ಕ್ರಮಗಳು ಇನ್ನೂ ಸೀಮಿತವಾಗಿವೆ.

ತಜ್ಞರ ಅಭಿಪ್ರಾಯದಂತೆ, ಜೇನು ರಫ್ತು ಗುರಿಯನ್ನು ಕೈಬಿಡುವ ಅಗತ್ಯವಿಲ್ಲ. ಆದರೆ ಅದನ್ನು ಪರಿಸರ ಸ್ನೇಹಿ ಮತ್ತು ದೀರ್ಘಕಾಲಿಕ ಮಾದರಿಯತ್ತ ಕೊಂಡೊಯ್ಯುವುದು ಅಗತ್ಯವಾಗಿದೆ. ಇದಕ್ಕಾಗಿ ಪ್ರಸ್ತುತ ಇರುವ ಕನಿಷ್ಠ ರಫ್ತು ಬೆಲೆ ವ್ಯವಸ್ಥೆಯನ್ನು ಮುಂದುವರಿಸುವ ಜೊತೆಗೆ, ಜಿಐ ಟ್ಯಾಗ್ ಹೊಂದಿರುವ, ಸಿಂಗಲ್-ಆರಿಜಿನ್ ಹಾಗೂ ಆರ್ಗ್ಯಾನಿಕ್ ಪ್ರಮಾಣಿತ ಜೇನುಗಳಿಗೆ ವಿಶೇಷ ಉತ್ತೇಜನ ನೀಡುವ ನೀತಿ ರೂಪಿಸಬೇಕು ಎಂದು ಸಲಹೆ ನೀಡಲಾಗಿದೆ. ಇದರಿಂದ ಭಾರತಕ್ಕೆ ಜೇನು ರಫ್ತಿನಿಂದ ಸಿಗುವ ಆದಾಯವನ್ನು ಬ್ರೆಜಿಲ್, ಉಕ್ರೇನ್ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳ ಮಟ್ಟಕ್ಕೆ ಹೆಚ್ಚಿಸಲು ಸಾಧ್ಯವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜೇನು ಸಾಕಾಣಿಕೆ ನೀತಿಯಲ್ಲಿ ಕೀಟನಾಶಕ ನಿಯಂತ್ರಣವನ್ನು ಸೇರಿಸುವುದು ಅತ್ಯಗತ್ಯ ಎಂದು ತಜ್ಞರು ಹೇಳಿದ್ದಾರೆ. ಹೂ ಬಿಡುವ ಸಮಯದಲ್ಲಿ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡುವ ಮುನ್ನ ಜೇನು ಸಾಕಾಣಿಕಾರರಿಗೆ ಕಡ್ಡಾಯ ಮಾಹಿತಿ ನೀಡುವುದು, ಹೂಬಿಡುವ ಅವಧಿಯಲ್ಲಿ ನಿಯೊನಿಕೋಟಿನಾಯ್ಡ್ ಬಳಕೆಗೆ ನಿರ್ಬಂಧ ವಿಧಿಸುವುದು ಹಾಗೂ ಮಧುಕ್ರಾಂತಿ ಪೋರ್ಟಲ್ ಮೂಲಕ ರಾಸಾಯನಿಕ ಅವಶೇಷಗಳ ಮೇಲ್ವಿಚಾರಣೆ ನಡೆಸುವುದು ಪ್ರಮುಖ ಕ್ರಮಗಳಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಜಗತ್ತಿನ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ, ಭಾರತದ ಜೇನುನೊಣಗಳು ಇನ್ನೂ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮತ್ತು ರಫ್ತನ್ನು ಮುಂದುವರಿಸುತ್ತಿರುವುದು ಗಮನಾರ್ಹವಾಗಿದೆ. ಆದರೆ ಈ ಬೆಳವಣಿಗೆ ಪ್ರಕೃತಿಯ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತಿದ್ದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಪರಿಸರ ಸಮತೋಲನ ಕಾಪಾಡದೇ ಕೇವಲ ಉತ್ಪಾದನೆ ಮತ್ತು ರಫ್ತಿನತ್ತ ಗಮನ ಹರಿಸಿದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಾಗಬಹುದು ಎಂಬ ಎಚ್ಚರಿಕೆ ವ್ಯಕ್ತವಾಗಿದೆ. ಸ್ವೀಟ್ ರೆವಲ್ಯೂಷನ್ ಎಂದು ಕರೆಯಲ್ಪಡುವ ಭಾರತದ ಜೇನು ಕ್ರಾಂತಿ ಮೊದಲ ಹಂತದಲ್ಲಿ ಯಶಸ್ಸು ಕಂಡಿದೆ. ಈಗ ಅದರ ಎರಡನೇ ಹಂತದಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯನ್ನು ಸಮಾನವಾಗಿ ಗಮನಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

World Bee Day 2026: Is India’s honey revolution in danger? – ತುಳುಟೈಮ್ಸ್

ಇದನ್ನೂ ಓದಿ :ಕರ್ನಾಟಕ ಕರಾವಳಿಯಲ್ಲಿ ಮೇ 20ರಿಂದ 25ರವರೆಗೆ ಮೀನುಗಾರರಿಗೆ ಎಚ್ಚರಿಕೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=ijSpkhEtfMX7pGeC

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page