Puttur: ಕಾರು – ರಿಕ್ಷಾ ನಡುವಿನ ಅಪಘಾತದಲ್ಲಿ ಮಗು ಹಾಗೂ ಮಹಿಳೆ ಮೃತಪಟ್ಟ ಘಟನೆ ನಡೆದಿದ್ದು, ಈ ವೇಳೆ ಪುಟ್ಟ ಕಂದಮ್ಮನನ್ನು ಎದೆಗವುಚಿಗೊಂಡು ಚಿಕಿತ್ಸೆ ಕೊಡಿಸಲು ಮಹಿಳೆಯೊಬ್ಬರು ಮುಂದಾಗಿದ್ದಾರೆ. ಮಹಿಳಾ ನಾಯಕಿಯೊಬ್ಬರು ಮಾಡಿರುವ ಮಾನವೀಯ ಕಾರ್ಯ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಮಾತೃ ಹೃದಯದ ಮಹಾತ್ಕಾರ್ಯಕ್ಕೆ ಜನರು ಶಾಭಾಶ್ ಎಂದಿದ್ದಾರೆ.
ಪರ್ಪುಂಜದಲ್ಲಿ ಅ.31ರಂದು ಶುಕ್ರವಾರ ಸಂಜೆ 4.30ಕ್ಕೆ ರಿಕ್ಷಾ- ಕಾರು ನಡುವೆ ಅಪಘಾತ ಸಂಭವಿಸಿ, ರಿಕ್ಷಾದಲ್ಲಿದ್ದ ನಾಲ್ಕೂವರೆ ವರ್ಷ ಪ್ರಾಯದ ಮಗು ಷಜ್ವಾ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಮಗುವಿನ ಅಜ್ಜಿ ಜುಲೈಕಾ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆಕೆಯ ತಂದೆ ರಿಕ್ಷಾ ಚಾಲಕ ಹನೀಫ್ ಬನ್ನೂರು, ಅವರ ತಾಯಿ, ಪತ್ನಿ, ಇನ್ನೊಂದು ಮಗು, ನಾದಿನಿ ಮತ್ತು ನಾದಿನಿಯ 3 ತಿಂಗಳ ಹಸುಳೆ ಗಂಭೀರ ಗಾಯಗೊಂಡಿದ್ದರು.
ಈ ಘಟನೆ ಬಗ್ಗೆ ಮಾಹಿತಿ ಅರಿತ ಕೂಡಲೇ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ನೇರವಾಗಿ ಮೆಡ್ ಲ್ಯಾಂಡ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಪುಟ್ಟ ಮಗುವಿನ ಮಗುವಿನ ತಾಯಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಕಾರಣ, ಚಂದ್ರಪ್ರಭಾ ಅವರೇ ಮಗುವಿನ ಆರೈಕೆ ಮಾಡಿ, ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಇನ್ನೊಂದು ಖಾಸಗಿ ಆಸ್ಪತ್ರೆಗೆ ಹೋಗಿ ಆ ಬಳಿಕ ಮಗುವಿಗೆ ಸಿಟಿ ಸ್ಕ್ಯಾನ್ ಅಗತ್ಯವಿದ್ದ ಹಿನ್ನೆಲೆ ಮಗುವನ್ನು ದರ್ಶನ್ ಕಲಾ ಮಂದಿರ ಬಳಿ ಇರುವ ಸ್ಕ್ಯಾನಿಂಗ್ ಸೆಂಟರ್ ಗೆ ಕೊಂಡು ಹೋಗಿ ಸಿಟಿ ಸ್ಕ್ಯಾನ್ ಮಾಡಿಸಿದ್ದಾರೆ. ಸಿಟಿ ಸ್ಕ್ಯಾನ್ ಮಾಡಿದ ಫೀಸ್ ನ್ನು ಕೂಡಾ ಅವರೇ ಭರಿಸಿದ್ದಾರೆ.
ಈ ವೇಳೆ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ಮಗು ಅತ್ತಾಗ ಮಮತೆಯ ತೋರಿಸಿದ್ದಾರೆ. ಹೆತ್ತ ತಾಯಿ ಪ್ರಜ್ಞೆಯಿಲ್ಲದೆ ಮಲಗಿದ್ದರೆ ಪುಟ್ಟ ಕಂದಮ್ಮ ಈ ಮಹಾತಾಯಿಯ ಮಡಿಲಲ್ಲಿ ಆರೈಕೆ ಪಡೆದಿದೆ.
ಮನೆ ಸದಸ್ಯರ ಜತೆ ಕಟೀಲು ದೇಗುಲಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಚಂದ್ರಪ್ರಭಾ ಗೌಡ, ಸುದ್ದಿ ಕೇಳಿ ತಕ್ಷಣ ಕಟೀಲು ಪ್ರವಾಸ ರದ್ದು ಮಾಡಿ ಅಸ್ಪತ್ರೆಗೆ ಧಾವಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಕೂಡ ನನ್ನ ಕಾರ್ಯಕ್ಕೆ ನೆರವಾಗಿದ್ದಾರೆ ಎಂದು ಚಂದ್ರಪ್ರಭಾ ಹೇಳಿದ್ದಾರೆ. ನಾನು ದೇವರ ಬಳಿ ಮಗು ಬದುಕಿ ಬರಲಿ ಎಂದು ಪ್ರಾರ್ಥಿಸಿದ್ದಾಗಿ ಮಾಧ್ಯಮ ಮುಂದೆ ಹೇಳಿದ್ದಾರೆ. ಇವರ ಈ ಕಾರ್ಯಕ್ಕೆ ಭರಪೂರ ಶ್ಲಾಫನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸರ್ಕಾರಕ್ಕೆ ರೈತರ ಪರ ಕಾಳಜಿಯಿಲ್ಲ : ಕಬ್ಬಿನ ಬೆಲೆ ನಿಗದಿಗಾಗಿ ಮುಗಿಲು ಮುಟ್ಟಿದ ರೈತರ ಆಕ್ರೋಶ
=========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=Gu55SPqpoprpBL6I











