Karkala: ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜನಿವಾರ ಮತ್ತ ಕೈ ಕಟ್ಟಿದ ದಾರ ತೆಗೆಸಿದ ಶಿಕ್ಷಕನನ್ನು ಶಾಲಾ ಕರ್ತವ್ಯದಿಂದ ವಜಾಗೊಳಿಸಿದ ಘಟನೆ ನಡೆದಿದೆ. ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿಗಳ ಜನಿವಾರ, ಕೈಗೆ ಕಟ್ಟಿದ ದಾರ ತೆಗೆಸಿದ ಆರೋಪದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ಅವರನ್ನು ಸೋಮವಾರ ಶಾಲಾ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಕಲಬುರಗಿ ಮೂಲದ ಮಕಾಂದರ್, 2025ರ ಜೂನ್ನಲ್ಲಿ ಅತಿಥಿ ಶಿಕ್ಷಕನಾಗಿ ವಸತಿ ಶಾಲೆಗೆ ಸೇರಿಕೊಂಡಿದ್ದರು.
ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ದೈಹಿಕ ಶಿಕ್ಷೆ ನೀಡುವುದು. 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ತರುವಂತ ಜನಿವಾರ ಮತ್ತು ಕೈದಾರ ತೆಗೆಯಲು ಸೂಚಿಸುವುದು ಸೇರಿದಂತೆ ಹಲವು ಆರೋಪಗಳು ಮಕ್ಕಳಿಂದ ಹಾಗೂ ಪೋಷಕರಿಂದ ಕೇಳಿಬಂದಿದ್ದವು.
ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸ್ಥಳೀಯರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕ ಮಕಾಂದರ್ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ವರ್ತನೆಯಲ್ಲಿ ಯಾವುದೇ ಬದಲಾವಣೆ ತೋರದ ಹಿನ್ನಲೆ, ಪೋಷಕರ ಆಕ್ರೋಶದ ನಡುವೆ ಪ್ರಾಂಶುಪಾಲರು ಅವರನ್ನು ತಕ್ಷಣವೇ ವಜಾಗೊಳಿಸಿದ್ದಾರೆ.
ಶಾಲಾ ಆಡಳಿತದಿಂದ ಶಿಕ್ಷಕನ ವಜಾ ಕ್ರಮಕ್ಕೆ ಪೋಷಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಧಾರ್ಮಿಕ ಗೌರವ ಕಾಪಾಡುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Sandalwood: ಸೈಕಲಾಜಿಕಲ್ ಥ್ರಿಲ್ಲರ್ ಫೆಬ್ರವರಿ 30 ಚಿತ್ರದ ಟೀಸರ್ ಬಿಡುಗಡೆ!
—————–
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











