ಆಕೆಯ ಎರಡು ದಶಕಗಳ ಹೋರಾಟ ಅಂತ್ಯ ಕಂಡಿದೆ. ಉಗ್ರರ ನೆಲದಿಂದ ಓಡಿ ಬಂದು ಭಾರತದಲ್ಲಿ ಬದುಕು ಕಟ್ಟಿಕೊಂಡ ಹಿಂದು ಮಹಿಳೆ ಈಕೆ. ದೇಶವನ್ನು ತೊರೆದ ಹೆಣ್ಣು ಮಗಳೊಬ್ಬಳು ಸತತ ಹೋರಾಟ ನಡೆಸಿ ಭಾರತೀಯಳು ಆದ ಕಥೆಯ ಬಗ್ಗೆ ಹೇಳ್ತಿವಿ ಕೇಳಿ. ನಾವೆಲ್ಲಾ ಸಿನೆಮಾಗಳಲ್ಲಿ ಪೌರತ್ವ ಪಡೆಯಲು ನಡೆಸುವ ಹೋರಾಟದ ಬಗ್ಗೆ ನೋಡಿದ್ದೇವೆ.
ಇಲ್ಲೊಬ್ಬಳು ನಿರಂತರ ಹೋರಾಟ ನಡೆಸಿ ಭಾರತೀಯ ಪೌರತ್ವ ಪಡೆದಿದ್ದಾಳೆ. ಈಕೆಯ ಹೆಸರು ಪೂನಂ. ಉಗ್ರರ ಕೂಪವಾದ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿನ ಭಯೋತ್ಪಾದನೆಯಿಂದ ಬೇಸತ್ತು ತನ್ನ ತವರು ತೊರೆದಾಕೆ. ಸುಮಾರು ಎರಡು ದಶಕಗಳ ಬಳಿಕ ಪೂನಂಗೆ ಭಾರತೀಯ ಪೌರತ್ವ ದೊರೆತಿದೆ.
ಪೂನಂ 2004 ರಲ್ಲಿ ತನ್ನ ಸಹೋದರ ಗಗನ್ ಜೊತೆ ಪಾಕಿಸ್ತಾನದ ಗಡಿಯನ್ನು ದಾಟಿ ಭಾರತಕ್ಕೆ ಬರ್ತಾಳೆ. ಪಾಕಿಸ್ತಾನದಲ್ಲಿನ ಭಯೋತ್ಪಾದನೆ, ಧಾರ್ಮಿಕ ಮೂಲಭೂತವಾದ ಮತ್ತು ತೀವ್ರ ಬಡತನದ ಕೂಪದಲ್ಲಿ ನರಳುವುದಕ್ಕಿಂತ ಭಾರತದಲ್ಲಿ ಹೆಚ್ಚು ಮುಕ್ತ ಮತ್ತು ಆರಾಮದಾಯಕ ಜೀವನವನ್ನು ನಡೆಸುವ ಆಶಯದೊಂದಿಗೆ ಭಾರತದಲ್ಲಿಯೇ ಉಳಿಯಲು ನಿರ್ಧರಿಸ್ತಾಳೆ. ಆರಂಭದಲ್ಲಿ, ದೆಹಲಿ ಮತ್ತು ರಾಂಪುರ ನಡುವೆ ಆಗಾಗ ಸ್ಥಳಾಂತರಗೊಂಡರು. 2005 ರಲ್ಲಿ, ಪೂನಂ ಸ್ಥಳೀಯ ಉದ್ಯಮಿ ಪುನೀತ್ ಎಂಬುವರನ್ನು ವಿವಾಹವಾಗ್ತಾರೆ.

ಮದುವೆಯಾದ ಬಳಿಕವೂ ತನ್ನ ಪೋಷಕರು ಸಂಬಂಧಿಕರ ಮೇಲಿನ ಪ್ರೀತಿಯಿಂದ, ಪೂನಂ ಆಗಾಗ್ಗೆ ಅವರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗ್ತಿದ್ರು. ಪೂನಂ ಬಳಿ ಪಾಕಿಸ್ತಾನಿ ಗುರುತಿನ ಚೀಟಿಯನ್ನು ಇದ್ದಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು. ಕೆಲವು ವರ್ಷಗಳ ನಂತರ, ಗುರುತಿನ ಚೀಟಿ ಅವಧಿ ಮುಗಿದು ಪಾಕಿಸ್ತಾನಿ ಪಾಸ್ಪೋರ್ಟ್ ನವೀಕರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ತನ್ನ ತವರು ಮನೆಗೆ ಭೇಟಿ ನೀಡುವ ಪೂನಂ ಕನಸು ಭಗ್ನವಾಯಿತು.
ಇದಾದ ಬಳಿಕ ಪೂನಂ, ಭಾರತವನ್ನು ತಮ್ಮ ತವರು ಮನೆಯೆಂದು ಪರಿಗಣಿಸಲು ಪ್ರಾರಂಭಿಸ್ತಾರೆ. ಇಲ್ಲಿಗೆ ಬಂದ ನಂತರ ಭಾರತೀಯ ಪೌರತ್ವಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದರು. ಆದರೆ, ಅವೆಲ್ಲವೂ ರೆಜೆಕ್ಟ್ ಆದವು. ಆದ್ರೂ ತನ್ನ ಪ್ರಯತ್ನವನ್ನು ಮಾತ್ರ ನಿಲ್ಸಿಲ್ಲ. ನಿರಂತರವಾಗಿ ಅರ್ಜಿ ಸಲ್ಲಿಸಿದ ಪರಿಣಾಮ ಈಗ ಅವರಿಗೆ ಭಾರತೀಯ ಪೌರತ್ವ ದೊರಕಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ನಿಬಂಧನೆಗಳ ಪ್ರಕಾರ ಅವರನ್ನು ಇತ್ತೀಚೆಗೆ ಭಾರತೀಯ ನಾಗರಿಕಳೆಂದು ಘೋಷಣೆ ಮಾಡಲಾಯಿತು. ಈ ವರ್ಷದ ದೀಪಾವಳಿ ಅವ್ರಿಗೆ ಮತ್ತಷ್ಟು ಖುಷಿಯನ್ನು ಕೊಟ್ಟಿದೆ.

ಈ ಪೌರತ್ವ ನಮಗೆ ನಿಜಕ್ಕೂ ಹಬ್ಬದ ಉಡುಗೊರೆ. ಇದು ಈ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಿದೆ. ನಾವು ಲಖನೌಗೆ ಹೋಗಿ ಪೌರತ್ವ ದಾಖಲೆಗಳನ್ನು ಸಲ್ಲಿಸುತ್ತೇವೆ ಎಂದು ಪುನೀತ್ ಸಂತೋಷದಿಂದ ಹೇಳಿದ್ದಾರೆ.
ನನ್ನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಶೀಘ್ರದಲ್ಲೇ ನಾನು ಆಧಾರ್, ಪ್ಯಾನ್ ಕಾರ್ಡ್ ಮತ್ತು ಇತರ ಭಾರತೀಯ ಗುರುತಿನ ಚೀಟಿಗಳಿಗೆ ಅರ್ಜಿ ಸಲ್ಲಿಸುತ್ತೇನೆ. ನನ್ನ ಬಳಿ ಇವುಗಳಿಲ್ಲದಿದ್ದರೂ, ನಾನು ಭಾರತೀಯಳೇ. ಆದರೆ ಇಂದಿನಿಂದ, ನಾನು ನಿಜವಾದ ಭಾರತೀಯಳಾಗಿ ಬದುಕುತ್ತೇನೆ ಎನ್ನುತ್ತಾ ಪೂನಂ ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Bantwal: ಆಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿ – ವ್ಯಕ್ತಿಯ ಬಂಧನ
==========================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











