Udupi : ನಮ್ಮ ದೇಶದ ಗೌಪ್ಯತೆಯನ್ನು ಬೇರೆಡೆ ರವಾನಿಸುವ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು, ನಮ್ಮ ಭದ್ರತೆಗೆ ತೊಂದರೆಯನ್ನುಂಟು ಮಾಡಲು ಇಲ್ಲಿಂದಲೇ ಸಂಚುಕಾರ ಹೂಡಲಾಗಿತ್ತು ಎಂದು ವರದಿಯಾಗಿದೆ. ಉಡುಪಿಯಲ್ಲಿ ಭಾರತೀಯ ನೌಕಾ ದಳದ ಹಡಗುಗಳ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಇವರು ಕೊಚ್ಚಿನ್ ಶಿಪ್ಯಾರ್ಡ್ನ ಸಿಬ್ಬಂದಿಯಾಗಿದ್ದು, ವಾಟ್ಸಾಪ್ ಮೂಲಕ ಮಾಹಿತಿಯನ್ನು ರವಾನಿಸಿ ದೇಶದ ಭದ್ರತೆಗೆ ಧಕ್ಕೆ ತಂದಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದ್ದು, ಕೋರ್ಟ್ ಇವರಿಗೆ ಡಿಸೆಂಬರ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಆದೇಶಿಸಿದೆ.
ಆರೋಪಿಗಳು ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಅನಂತರಾಮ್ ಭಟ್ಪುರದ ರೋಹಿತ್ ಹಾಗೂ ಹಂಜಾಬಾದ್ ಮೈಂದಾನ್ ನಿವಾಸಿ ಸಂತ್ರಿ ಎಂದು ಹೇಳಲಾಗಿದೆ. ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಅಪಾಯವನ್ನುಂಟು ಮಾಡುವ ಮತ್ತು ಆoತರಿಕ ಭದ್ರತೆ ಧಕ್ಕೆ ತರುವ ಕೃತ್ಯ ಎಸಗಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಅಲ್ಲದೆ ಆರೋಪಿಗಳು ಒಂದೂವರೆ ತಿಂಗಳಿನಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ. ಇಬ್ಬರೂ ಕೂಡಾ ಡಿಪ್ಲೋಮಾ ಪದವೀಧರರಾಗಿದ್ದು, ರೋಹಿತ್ ಎಂಬಾತ ಕಳೆದ ಆರು ತಿಂಗಳ ಹಿಂದಷ್ಟೇ ಮಲ್ಪೆಗೆ ವರ್ಗಾವಣೆಯಾಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ನ ಸಿಇಒ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆಯನ್ನು ಕಾರ್ಕಳದ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ನೇತೃತ್ವದಲ್ಲಿ ಮಲ್ಪೆ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಡಿ., ಎಎಸ್ಐ ಹರೀಶ್, ಸಿಬ್ಬಂದಿ ರವಿ ಜಾಧವ್ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿರುತ್ತಾರೆ.
ಇದನ್ನೂ ಓದಿ :Tulunad: ತುಳುನಾಡಿನ ದೈವಗಳಿಗೆ ಮತ್ತೆ ಸಿನಿಮಾದಿಂದ ಅಪಚಾರ: ನಿಲ್ಲೋದು ಯಾವಾಗ?
…….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lBNr8Dn_qyE?si=yf-ZjTq6Vi7iXrot











