Belagavi : ದಿನೇ ದಿನೇ ಮಲಿನಗೊಳ್ಳುತ್ತಿರುವ ನಮ್ಮ ಸುತ್ತಲ ಪರಿಸರ ಹಾಗೂ ನೀರು ಅತಿಯಾಗಿ ಕಲುಷಿತಗೊಳ್ಳುತ್ತಿವೆ. ಎಷ್ಟೇ ಜಾಗೃತಿ ಮೂಡಿಸಿದರೂ ಜನರಿಂದ ಪ್ರಕೃತಿಗೆ ಉಸಿರುಗಟ್ಟಿದಂತ ಅನುಭವವಾಗುತ್ತಿದೆ. ಹಾಗಾಗಿ, ಇಲ್ಲೊಂದು ಗ್ರಾಮದಲ್ಲಿ ನೀರಿನ ನೈರ್ಮಲ್ಯ ಕಾಪಾಡಲು ಜನ ಜಾಗೃತಿಗಾಗಿ ಗಂಗಾರತಿಯನ್ನು ಮಾಡಲಾಗಿರುತ್ತದೆ.
ಜನರಲ್ಲಿ ನದಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶ ;
ಎಲ್ಲರಿಗೂ ಗಂಗಾರತಿ ಅಂದ್ರೆ ಮೊದಲು ನೆನಪಾಗೋದು ಕಾಶಿಯ ಗಂಗಾ ಆರತಿ. ಅದೇ ಮಾದರಿಯಂತೆ ಇದೀಗ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಕ್ಷೇತ್ರ ಶ್ರೀ ಹೊಳೆಮ್ಮಾ ದೇವಿ ದೇವಸ್ಥಾನದ ಪಕ್ಕವಾಗಿ ಹರಿಯುವ ಹಿರಣ್ಯಕೇಶಿ ನದಿಯಲ್ಲಿ ಇದೀಗ ಕಾಶಿಯ ಗಂಗಾ ಆರತಿಯ ಮಾದರಿಯಲ್ಲಿ ಆರತಿಯನ್ನು ಬೆಳಗುವ ಕ್ಷಣ ಆರಂಭವಾಗಿದೆ. ನದಿಯ ಸಂರಕ್ಷಣೆಯನ್ನು ಕುರಿತು ಹಾಗೂ ಜನರಲ್ಲಿ ನದಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಈ ಉತ್ಸವಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ನದಿಗಳ ಸ್ವಚ್ಛತೆ ವಿಷಯದಲ್ಲಿ ಜನರು ಹೆಚ್ಚಿನ ಗಮನ ನೀಡುವುದಿಲ್ಲ ;
ಪ್ರತಿ ಸಂಜೆ ನಡೆಯುವ ಈ ಗಂಗಾ ಆರತಿ ಕಾರ್ಯಕ್ರಮಕ್ಕೆ ಭಕ್ತರು ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಬಂದು ಭಕ್ತಿ ಭಾವದಿಂದ ಈ ಒಂದು ಒಳ್ಳೆಯ ಕೆಲಸಕ್ಕೆ ಸಾಕ್ಷಿಯಾಗುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ನದಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದ್ದರೂ ನದಿಗಳ ಸ್ವಚ್ಛತೆ ವಿಷಯದಲ್ಲಿ ಜನರು ಹೆಚ್ಚಿನ ಗಮನ ನೀಡುವುದಿಲ್ಲ ಎಂಬ ವಿಷಾದವನ್ನು ಸ್ವಾಮಿಗಳು ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಗ್ರಾಮಸ್ಥರು ಭಕ್ತರು ಹಾಗೂ ಪರಿಸರ ಪ್ರೇಮಿಗಳು ಈ ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಗ್ರಾಮದ ನದಿಯ ಸಂರಕ್ಷಣೆಗೆ ಇದು ಒಳ್ಳೆಯ ಆರಂಭವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ :Bengaluru: “ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ” ಕುರಿತು ಬಿಜೆಪಿ ವಿಡಿಯೋ ಬಿಡುಗಡೆ!
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lBNr8Dn_qyE?si=yf-ZjTq6Vi7iXrot











