Bengaluru: ಚಿಕ್ಕಪೇಟೆಯ ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಸಂಪೂರ್ಣವಾಗಿ ಹಾಳಾಗಿರುವ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಅವರು ಸ್ಥಳ ವೀಕ್ಷಣೆ ಮಾಡಿ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇವರು ಅಧಿಕಾರ ಹಂಚಿಕೆಯಲ್ಲಿದ್ದಾರೆ. ಹಳ್ಳ ಗುಂಡಿಗಳ ಕಡೆ ಗಮನ ಕೊಡುತ್ತಿಲ್ಲ; ಇದು ದುರಹಂಕಾರದ ಪರಮಾವಧಿ ಎಂದು ಟೀಕಿಸಿದರು. ಇಡೀ ಕರ್ನಾಟಕದಲ್ಲಿ ಹಳ್ಳ ಬಿದ್ದ ರಸ್ತೆಗಳು, ಕಸದ ರಾಶಿ, ಅಭಿವೃದ್ಧಿ ಶೂನ್ಯ, ಲೂಟಿ- ಇಷ್ಟೇನಾ ನಿಮ್ಮ ಎರಡೂವರೆ ವರ್ಷದ ಸಾಧನೆ ಎಂದು ಕೇಳಿದರು.
ಮಾನ ಮರ್ಯಾದೆ ಇದ್ದರೆ ಗುಂಡಿ ಮುಚ್ಚಬೇಕು. ರಸ್ತೆ ಡಾಂಬರೀಕರಣ ಮಾಡಿ ಎಂದು ಒತ್ತಾಯಿಸಿದರು. ಮಾತೆತ್ತಿದರೆ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ಕಳೆದ 4 ತಿಂಗಳಿನಿಂದ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತೀರಲ್ಲವೇ?. ಇದು ಆಸ್ಪತ್ರೆ ರಸ್ತೆ. ಇಲ್ಲಿ ಪ್ರತಿಭಟನೆ, ಪರಿಶೀಲನೆಗೆ ಬಂದಿದ್ದೇವೆ ಎಂದು ತಿಳಿಸಿದರು. ಈ ರಸ್ತೆಯಲ್ಲಿ ಹೋದರೆ ತನ್ನಿಂತಾನೇ ಹೆರಿಗೆ ಆಗುತ್ತದೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಒಂದು ಕಿಮೀ ರಸ್ತೆಯಲ್ಲಿ 400 ಹಳ್ಳ ಬಿದ್ದಿದೆ ಎಂದು ಗಮನ ಸೆಳೆದರು.
ಕೇವಲ 5 ಲಕ್ಷ ಕೋಟಿ ಸಾಲ ಮಾಡಿದ್ದೇ ಇವರ ಸಾಧನೆ. ರಾಜ್ಯ ಸಂಪೂರ್ಣ ದಿವಾಳಿ ಆಗಿದ್ದು ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕ ಗೋವಿಂದ ಕಾರಜೋಳ ಅವರು ಒತ್ತಾಯಿಸಿದ್ದಾರೆ.ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ. ಭ್ರಷ್ಟಾಚಾರ ಮತ್ತು ಅಧಿಕಾರದ ಆಸೆಗಾಗಿ ಕಚ್ಚಾಟ ಬಿಟ್ಟರೆ ಬೇರೆ ಯಾವುದೇ ಕೆಲಸವನ್ನು ಇವರಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಕಾಣಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ಬೆಂಗಳೂರು ಪ್ರಪಂಚದಲ್ಲೇ ಹೆಸರು ಮಾಡಿದ ನಗರ. ಇವರ ಕೈಯಲ್ಲಿ ಇದು ನರಕ ಆಗಿದೆ. ಇಲ್ಲಿ ಕೇವಲ ಗುಂಡಿಗಳಷ್ಟೇ ಅಲ್ಲ; ಯಾವ ವ್ಯವಸ್ಥೆಯೂ ಸರಿ ಇಲ್ಲ. ಆಡಳಿತ ವ್ಯವಸ್ಥೆ ಸರಿ ಇಲ್ಲ; ಬ್ಯಾಂಕ್ಗಳ ದರೋಡೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಒಂಟಿ ಮಹಿಳೆಯರನ್ನು ಗಮನಿಸಿ ಕೊಲೆ ಮಾಡಿ ದರೋಡೆ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ವೇಳೆ ಸಂಸದ ಪಿ.ಸಿ. ಮೋಹನ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











