Udupi: ಸಹಕಾರಿ ಸಪ್ತಾಹಗಳು ನಡೆಯುತ್ತಿರುವ ಈ ನಡುವೆ ಉಡುಪಿಯ ಸ್ಯಾಬರಕಟ್ಟೆ ಗ್ರಾಮದಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಆರೋಪ ಗ್ರಾಮಸ್ಥರ ನಿದ್ದೆಗೆಡಿಸಿದೆ. ಶಾಖೆಯ ಮ್ಯಾನೇಜರ್ ಹಾಗೂ ಕ್ಲರ್ಕ್, ಗ್ರಾಹಕರು ಇರಿಸಿದ್ದ ಹಣ ಹಾಗೂ ಚಿನ್ನ, ಲಪಟಾಯಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು ಗ್ರಾಹಕರು ಆತಂಕದಲ್ಲಿದ್ದಾರೆ.
ಗ್ರಾಹಕರು ಇರಿಸಿದ ಡೆಪಾಸಿಟ್ ಆಧಾರದಲ್ಲಿ ಲೋನ್ !
ಸಹಕಾರಿ ಕ್ಷೇತ್ರದಲ್ಲಿ ಕರಾವಳಿಯ ಕೊಡುಗೆ ದೊಡ್ಡದು. ಆದರೆ ಅಲ್ಲೊಂದು ಇಲ್ಲೊಂದು ಅಪವಾದ ಎಂಬಂತೆ ಅವ್ಯವಹಾರದ ಆರೋಪಗಳು ಆಗಿಂದಾಗೆ ಕೇಳಿ ಬರುತ್ತಿದೆ. ಈಗ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ, ಸಿಬ್ಬಂದಿಗಳಿಂದಲೇ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಮ್ಯಾನೇಜರ್ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್, ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಯಷ್ಟು ಅವ್ಯವಹಾರ ನಡೆಸಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಸಂಸ್ಥೆಗೆ ಮೋಸ ಮಾಡಿ ಗ್ರಾಹಕರು ಇರಿಸಿದ ಡೆಪಾಸಿಟ್ ಆಧಾರದಲ್ಲಿ ಲೋನ್ ಪಡೆದಿರುವುದಾಗಿ ದೂರು ದಾಖಲಾಗಿದೆ. ಹರೀಶ್ ಕುಲಾಲ್ ತನ್ನ ಚಿನ್ನಾಭರಣ ಅಡವಿಟ್ಟು 21 ಲಕ್ಷ ಪಡೆದಿದ್ದು,ಅಡವಿಟ್ಟಿ ಚಿನ್ನ , ಈಗ ಸಂಸ್ಥೆಯ ಬಳಿ ಇಲ್ಲದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಮೊಯ್ದಿನ್ ಬಾವಾ ವಾಟ್ಸಾಪ್ ಹ್ಯಾಕ್ – ಹಣಕ್ಕಾಗಿ ಬೇಡಿಕೆಯಿಟ್ಟ ಖದೀಮರು
ಗ್ರಾಹಕರು ಯಾವುದೇ ಆತಂಕ ಪಡಬೇಕಾಗಿಲ್ಲ..ಮುಖ್ಯ ಅಧಿಕಾರಿಗಳು ಸ್ಪಷ್ಟನೆ!
ಇಬ್ಬರು ಸಿಬ್ಬಂದಿಗಳು ಸೇರಿಕೊಂಡು ಸಂಸ್ಥೆಗೆ ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿ ವಂಚಿಸಿರುವುದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಹಕರು ಶಾಖೆಯತ್ತ ಧಾವಿಸಿ ಬರುತ್ತಿದ್ದಾರೆ. ಕೃಷಿ, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಪರಿಸರದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣ ಹಾಗೂ ಚಿನ್ನವನ್ನು ಭದ್ರತೆಯ ಕಾರಣಕ್ಕೆ ಗ್ರಾಹಕರು ಇರಿಸಿದ್ದಾರೆ. ಸದ್ಯದ ಬೆಳವಣಿಗೆಯಿಂದ ಆತಂಕ ಹೆಚ್ಚಿದ್ದು ಕಚೇರಿಗೆ ಬಂದು ತಮ್ಮ ಡೆಪಾಸಿಟ್ ಹಣದ ಸುರಕ್ಷತೆಯ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರು ಸಿಬ್ಬಂದಿಗಳನ್ನು ಅಮಾನತುಗೊಳಿಸಿರುವ ಸಂಸ್ಥೆಯ ಮುಖ್ಯ ಅಧಿಕಾರಿಗಳು, ಗ್ರಾಹಕರಿಗೆ ಯಾವುದೇ ಆತಂಕ ಬೇಡ ಅವರ ಹಣ ಹಾಗೂ ಚಿನ್ನ ಭದ್ರವಾಗಿದೆ ಆರೋಪಿಗಳಿಂದಲೇ ವಸೂಲಿ ಮಾಡಿ ನಷ್ಟಭರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











