Mangaluru: ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಸುವರ್ಣ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ನಗರ ಹೊರವಲಯದ ಪಣಂಬೂರಿನ ಡಾ.ಬಿ.ಆರ್. ಅಂಬೇಡ್ಕರ್ ಸ್ಟೇಡಿಯಂನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು.
ನನ್ನ ಕರೆದಿಲ್ಲ..ಬೇಸರ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್..!
ಈ ವೇಳೆ ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೊನೋವಾಲ್,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ಆಹ್ವಾನ ನೀಡಿಲ್ಲ ಎಂಬ ಆರೋಪವಿದ್ದು, ಈ ಬಗ್ಗೆ ಕೇಂದ್ರ ಸಚಿವರು,ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ಪೋರ್ಟ್ ಅಥಾರಿಟಿಯ ಮುಖ್ಯಸ್ಥರಿಗೆ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವ ಬಗ್ಗೆ ಪತ್ರದ ಮೂಲಕ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ತನ್ನ ಗೋಲ್ಡನ್ ಜೂಬಿಲಿ ಸಮಾರಂಭವನ್ನು ಆಯೋಜಿಸುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ.
ಪ್ರೋಟೋಕಾಲ್ ಉಲ್ಲಂಘನೆಗೆ ಅಜ್ಞಾನವೇ ಕಾರಣ!
ಈ ಕಾರ್ಯಕ್ರಮದಲ್ಲಿ ಭಾರತದ ಸರ್ಕಾರದ ವಿವಿಧ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿಯು ತನ್ನ ಸ್ಥಾಪನೆಯಿಂದ ಇಂದಿನವರೆಗೆ ಸಾಧಿಸಿರುವ ಯಶಸ್ಸುಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಅದಕ್ಕಾಗಿ ಅಥಾರಿಟಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ವಿಷಾದಕರ ಸಂಗತಿಯೇನಂದರೆ, ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಆಹ್ವಾನ ನೀಡದಿರುವುದು ಗಮನಕ್ಕೆ ಬಂದಿದೆ. ಕೆಲವೊಮ್ಮೆ ಪ್ರೋಟೋಕಾಲ್ ಉಲ್ಲಂಘನೆ ಅಜ್ಞಾನದ ಕಾರಣದಿಂದಾಗಿರಬಹುದು. ಆದರೆ ಈ ಪ್ರಕರಣದಲ್ಲಿ ಅದು ಉದ್ದೇಶಪೂರ್ವಕವಾಗಿದೆ ಎನ್ನುವ ಭಾವನೆ ಮೂಡುತ್ತದೆ. ಮಂಗಳೂರು ಕ್ಷೇತ್ರದ ಭಾರತೀಯ ಜನತಾ ಪಕ್ಷದ ಹಾಲಿ ಮತ್ತು ಮಾಜಿ ಜನ ಪ್ರತಿನಿಧಿಗಳನ್ನು ಆಹ್ವಾನಿಸಲು ಅಥಾರಿಟಿ ಮರೆತಿಲ್ಲ ಎಂದರು.
ಬಂದರು ಮತ್ತು ಅಥಾರಿಟಿ ಮುಂದುವರೆಯಲಿ..!
ಜಿಲ್ಲೆಯಲ್ಲಿ ಬಲಪಂಥೀಯ ಸಂಘಟನೆಗಳ ಮುಖ್ಯಸ್ಥರನ್ನು ಆಹ್ವಾನಿಸುವ ಮಟ್ಟಿಗೆ ಅಥಾರಿಟಿ ಹೋಗಲಿಲ್ಲವೆಂಬುದಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ. ರಾಜ್ಯ ಸರ್ಕಾರದ ವಿರುದ್ಧ ತೋರಿಸಿರುವ ಈ ರೀತಿಯ ಅಸೌಜನ್ಯತೆಗೆ ಸತತವಾಗಿ ಮನಸ್ಸು ಬೇಸರಗೊಂಡರೂ, ಬಂದರು ಮತ್ತು ಅಥಾರಿಟಿ ಮುಂದುವರೆಯಲಿ. ಅಭಿವೃದ್ಧಿ ಕಾಣಲಿ ಮತ್ತು ಶತಮಾನಗಳವರೆಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲಿ ಎಂಬುದು ನಮ್ಮ ಹಾರೈಕೆ. ಭವಿಷ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಮಂಗಳೂರಿನ ಬಂದರು ಪ್ರೋಟೋಕಾಲ್ ಪಾಲನೆ ಮಾಡಲಿ. ಕರ್ನಾಟಕದ ಸಮುದ್ರ ಮಾರ್ಗದ ಹೆಬ್ಬಾಗಿಲು ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸಲಿ, ಬಿಜೆಪಿಯ ಸಮುದ್ರ ಮಾರ್ಗದ ಹೆಬ್ಬಾಗಿಲು ಎಂಬ ಬಣ್ಣ ತಾಳದಿರಲಿ ಎಂದು ಆಶಿಸುತ್ತೇವೆ ಎಂದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











