Nagalakshmi Choudhary: ಧರ್ಮಸ್ಥಳದಲ್ಲಿ ಅಸಹಜವಾಗಿ ಸಾವನ್ನಪ್ಪಿದ ಮಹಿಳೆಯರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎಸ್ಐಟಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ಬೀದರ್ ನಲ್ಲಿ ಮಾತನಾಡಿದ ಅವರು, ಎಸ್ಐಟಿ ತನಿಖೆ ಮಾಡಿಲ್ಲ ಅಂತ ನಾನು ಪತ್ರ ಬರೆದಿಲ್ಲ, ಎಸ್ಐಟಿ ತನಿಖೆ ಬುರುಡೆ ಚಿನಯ್ಯಗೆ ಮಾತ್ರ ಸೀಮಿತವಾಗಬಾರದು. ಧರ್ಮಸ್ಥಳದಲ್ಲಿ ಸತ್ತವರ ಮತ್ತು ಅಸಹಜವಾಗಿ ಸತ್ತ ಮಹಿಳೆಯರ ಬಗ್ಗೆ ತನಿಖೆಯಾಗಬೇಕು. ತನಿಖೆ ನಡೆಸಿ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸುವಂತೆ ಎಸ್ಐಟಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಾಂಬ್ ಬ್ಲಾಸ್ಟ್ ಬಗ್ಗೆ ಮಾಹಿತಿ ಕಲೆಹಾಕ್ತಿದ್ದೀನಿ..!
ಸೌಜನ್ಯ ಕೊಲೆ ಪ್ರಕರಣ ಕೇಸ್ ಯಾವ ಹಂತದಲ್ಲಿದೆ..?
ಈ ಹಿಂದೆ ಈ ಪ್ರಕರಣದ ಕುರಿತಾಗಿ ಮಾತನಾಡಿದ ಇವರು ಮಹಿಳೆಯರ ಘನತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. 2012ರ ಅಕ್ಟೋಬರ್ 9ರಂದು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ನಾಪತ್ತೆಯಾಗಿದ್ದರು. ಮರುದಿನ ಈ ಹುಡುಗಿಯ ಶವ ನೇತ್ರಾವತಿ ನದಿ ಬಳಿ ಪತ್ತೆಯಾಗಿತ್ತು.ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ಸಂತೋಷ್ ರಾವ್ ಎಂಬಾತನನ್ನು ಆರೋಪಿ ಎಂದು ಬಂಧಿಸಲಾಗಿತ್ತು. ಆದರೆ, 2023ರ ಜೂನ್ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಂತೋಷ್ ರಾವ್ನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು.
ನ್ಯಾಯಾಲಯದ ತೀರ್ಪಿನ ನಂತರ, ಸೌಜನ್ಯಾ ಕುಟುಂಬ ಮತ್ತು ವಿವಿಧ ಸಂಘಟನೆಗಳು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಲು ಹೋರಾಟ ಮತ್ತು ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಸೌಜನ್ಯಾ ಪ್ರಕರಣದ ಜೊತೆಗೆ, ಧರ್ಮಸ್ಥಳ ಗ್ರಾಮದಲ್ಲಿ ಹಲವು ವರ್ಷಗಳಿಂದ ನಡೆದಿರುವ ಇತರ ಅಸಹಜ ಸಾವುಗಳು ಮತ್ತು ಅನಾಥ ಶವಗಳನ್ನು ಕಾನೂನುಬಾಹಿರವಾಗಿ ಹೂತಿಡಲಾಗಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಈ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ.ಈ ಪ್ರಕರಣಗಳು ರಾಜ್ಯಾದ್ಯಂತ ದೊಡ್ಡ ಮಟ್ಟದ ಸಾರ್ವಜನಿಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎಸ್ಐಟಿಗೆ ಪತ್ರ ಬರೆದಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











